ಉದ್ಯಮರತ್ನ ತಲ್ಲೂರು ಶಿವರಾಮ ಶೆಟ್ಟಿ
ಲೇಖಕರು : ಪಿ. ವಾಸುದೇವ ರಾವ್
ಶನಿವಾರ, ಜನವರಿ 30 , 2016
|
ಕಲೋಪಾಸಕ ಉದ್ಯಮಿಗೆ ಪ್ರಶಸ್ತಿಯ ತುರಾಯಿ ತಲ್ಲೂರು ಶಿವರಾಮ ಶೆಟ್ಟರೆಂದರೆ ಕರಾವಳಿ ಭಾಗದ ಕಲಾಕ್ಷೇತ್ರದಲ್ಲಿ ಸುಪರಿಚಿತ ಹೆಸರು. ಉದ್ಯಮಿಯಾಗಿ, ಹಲವು ಹೊಟೇಲುಗಳ ಮಾಲಕರಾಗಿ ಪ್ರಸಿದ್ಧರಾಗಿ ರುವ ಶಿವರಾಮ ಶೆಟ್ಟಿಯವರಿಗೆ ವಿದ್ವಜ್ಜನ ವಿಧೇಯತೆಯ ಮತ್ತೂಂದು ಮುಖವಿದೆ. ಹಾಗಾಗಿಯೇ ಉಡುಪಿಯ ಹೆಚ್ಚಿನ ಸಂಘಸಂಸ್ಥೆಗಳಲ್ಲಿ ಅವರು ಮುಂಚೂಣಿಯಲ್ಲಿ ನಿಂತು ಮುನ್ನಡೆಸುತ್ತಿದ್ದಾರೆ. ಪ್ರಸ್ತುತ ಅರ್ಧಶತಮಾನವನ್ನು ಪೂರೈಸಿದ ಸಂಭ್ರಮದಲ್ಲಿರುವ "ರಂಗಭೂಮಿ' ಸಂಸ್ಥೆಗೆ ಶಿವರಾಮ ಶೆಟ್ಟರೇ ಅಧ್ಯಕ್ಷರು.
|
ಅನೇಕ ವರ್ಷ ಯಕ್ಷಗಾನ ಕಲಾರಂಗ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಆಗ, ಯಕ್ಷಗಾನ ಕಲಾವಿದರಾಗಿ ವೇದಿಕೆ ಏರಿದ ಹಿರಿಮೆ ಅವರದು. ಉದ್ಯಮ ಕ್ಷೇತ್ರದ ವ್ಯಾವಹಾರಿಕ ಬದುಕನ್ನು ಕಲೆಯ ಒಡನಾಟದೊಂದಿಗೆ ಸಾರ್ಥಕಗೊಳಿಸಿದ ಶಿವರಾಮ ಶೆಟ್ಟರಿಗೆ ಕರ್ನಾಟಕ ಪ್ರದೇಶ ಹೊಟೇಲು ಮತ್ತು ಉಪಾಹಾರ ಮಂದಿರಗಳ ಸಂಘದ "ಉದ್ಯಮ ರತ್ನ' ಪ್ರಶಸ್ತಿ ಒಲಿದಿದೆ. ಜನವರಿ 23ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿ ಒಲಿದಿರುವುದು ಅವರ ಉದ್ಯಮ ಕ್ಷೇತ್ರದ ಸಾಧನೆಗೆ. ಆದರೆ, ಇಂಥ ಸಾಧನೆಯನ್ನು ಸಾಧ್ಯವಾಗಿಸಿದ್ದು ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಒಡನಾಟ. ಹಾಗಾಗಿ, ಪ್ರಶಸ್ತಿ ಸಂದಿರುವುದು ಸಂಸ್ಕೃತಿ ಮತ್ತು ಉದ್ಯಮಗಳು ಬೆಸುಗೆಗೊಂಡ ಶಿವರಾಮ ಶೆಟ್ಟರ ವ್ಯಕ್ತಿತ್ವಕ್ಕೆ ಎಂದರೆ ತಪ್ಪಾಗದು.
62 ತುಂಬಿದ್ದರೂ 26ರ ತಾರುಣ್ಯ ತೋರುತ್ತಿರುವ ತಲ್ಲೂರು ಶಿವರಾಮ ಶೆಟ್ಟಿ ಅವರು ತನ್ನ ಸಜ್ಜನಿಕೆಯಿಂದ, ಹೃದಯ ವೈಶಾಲ್ಯದಿಂದ ಎಲ್ಲೆಡೆ ಗೌರವಕ್ಕೆ ಪಾತ್ರರಾದವರು. ನಿಸ್ವಾರ್ಥ ಸೇವೆ, ದಾನ ಹಾಗೂ ಪರೋಪಕಾರದಿಂದ ಮಾತ್ರ ದೇವರ ಅನುಗ್ರಹ ಗಳಿಸಬಹುದು. ಅಂಥ ಪ್ರಾಪ್ತಿ ಶಿವರಾಮ ಶೆಟ್ಟರಿಗಿದೆ ಎಂಬುದು ಅಭಿಮಾನದ ವಿಷಯ.
ಯಾವುದೇ ಕಾರ್ಯ ಪ್ರಾರಂಭಿಸುವಾಗ "ಇದರಿಂದ ನನಗೇನು ಸಿಗುತ್ತದೆ!' ಎಂಬುದರ ಬದಲಾಗಿ "ಇದರಿಂದ ಇತರರಿಗೆ ನಾನೇನು ಕೊಡಬಲ್ಲೆ?' ಎಂಬುದಕ್ಕೆ ತನ್ನ ಜೀವನಕ್ರಮವನ್ನು ರೂಪಿಸಿ ಕೊಂಡವರು ತಲ್ಲೂರರು. ಸದಾ ಹಸನ್ಮುಖೀ, ಸ್ನೇಹಜೀವಿ. ಇಂದಿಗೂ ಗುರುಹಿರಿಯರ, ಹೆತ್ತವರ ಪಾದಸ್ಪರ್ಶಿಸಿ ವಂದಿಸಲು ಮುಂದಾಗುವ ಆದರ್ಶ ವ್ಯಕ್ತಿತ್ವದ ನಿರಹಂಕಾರಿ. ಅಪಾರ ದೈವಭಕ್ತ.
ವಿವಿಧ ಬಗೆಯ ಉದ್ಯಮಗಳ ಮಾಲಕತ್ವದೊಂದಿಗೆ ಹಲವಾರು ಕಾರ್ಮಿಕರಿಗೆ ಉದ್ಯೋಗ ದಾತರಾಗಿದ್ದಾರೆ. ಹಲವು ಅರ್ಹ ಬಡ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ. ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಿದ್ದಾರೆ. ರಂಗಭೂಮಿ, ಜಿಲ್ಲಾ ಹೊಟೇಲ್ ಮಾಲಕರ ಸಂಘ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್, ಕ್ರಿಶ್ಚಿಯನ್ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘ, ಚಿಟ್ಟಾಣಿ ಅಭಿಮಾನಿಗಳ ಬಳಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಶಿವರಾಮ ಶೆಟ್ಟರು ಯಕ್ಷಗಾನ ಕಲಾರಂಗ, ತುಳುಕೂಟ, ಬಂಟರ ಸಂಘ, ಲಯನ್ಸ್ ಕ್ಲಬ್, ಲಾಫರ್ಸ್ ಕ್ಲಬ್, ನಿತ್ಯಾನಂದ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ, ಭಾರತೀಯ ರೆಡ್ಕ್ರಾಸ್ ಸಂಘ, ಹಿರಿಯ ನಾಗರಿಕರ ಸಂಘ ಮುಂತಾದ ಅನೇಕ ಸಂಘಟನೆಗಳ ಮುಂಚೂಣಿಯಲ್ಲಿದ್ದಾರೆ,
|
ತಲ್ಲೂರು ಶಿವರಾಮ ಶೆಟ್ಟಿ |
|
ಜನನ |
: |
ಒಕ್ಟೋಬರ್ 9, 1950 |
ಕಲಾಸೇವೆ:
ವೃತ್ತಿಯಲ್ಲಿ ಹೋಟೇಲ್ ಉದ್ಯಮಿಯಾಗಿದ್ದುಕೊ೦ಡೇ ಸಾಹಿತ್ಯ, ರ೦ಗಭೂಮಿ ಮತ್ತು ಯಕ್ಷಗಾನ ಕ್ಷೇತ್ರಗಳಲ್ಲಿನ ಹಲವಾರು ಸ೦ಘಗಳನ್ನು ಮುನ್ನೆಡೆಸುತ್ತಿರುವ ಶೆಟ್ಟರು ಕರಾವಳಿ ಭಾಗದ ಕಲಾಕ್ಷೇತ್ರದಲ್ಲಿ ಸುಪರಿಚಿತ ಹೆಸರು.
|
|
|
ಯಕ್ಷಗಾನದ ಬಗ್ಗೆ, ಕಲಾವಿದರ ಬಗ್ಗೆ ಅಪಾರ ಪ್ರೇಮ ಬೆಳೆಸಿಕೊಂಡಿದ್ದ ತಲ್ಲೂರರು ಯಕ್ಷಗಾನ ಕಲಾರಂಗದ ಅಧ್ಯಕ್ಷರಾದಾಗ, "ಇವರೇನು ಯಕ್ಷಗಾನ ಕಲಾವಿದರೆ?' ಎಂಬ ಅಭಿಪ್ರಾಯವನ್ನು ಸವಾಲಾಗಿ ಸ್ವೀಕರಿಸಿ, 60ರ ಆಚೆಯ ಹರೆಯದಲ್ಲೂ ಶಾಸ್ತ್ರೀಯವಾಗಿ ಕುಣಿತ ಕಲಿತು ಯಕ್ಷಗಾನ ಕಲಾವಿದರಾಗಿ ಪ್ರದರ್ಶನ ನೀಡಿದ ಛಲವಾದಿ. ಈ ಸಾಧನೆಗೆ ಸಹಕರಿಸಿದ ಮುರಳಿ ಕಡೆಕಾರ್ ಮತ್ತು ಬನ್ನಂಜೆ ಸಂಜೀವ ಸುವರ್ಣರನ್ನು ಅವರು ಕೃತಜ್ಞತಾಪೂರ್ವಕ ಸ್ಮರಿಸುತ್ತಿರುತ್ತಾರೆ. ಅವರ ಕೃಷ್ಣನ ವೇಷ ಅತ್ಯಂತ ಆಕರ್ಷಕ.
ಹಲವಾರು ದೇವಸ್ಥಾನಗಳಲ್ಲಿ ಶಿವರಾಮ ಶೆಟ್ಟಿಯವರ ವತಿಯಿಂದ ವರ್ಷಂಪ್ರತಿ ಅನ್ನಸಂತರ್ಪಣೆಯ ಸೇವೆ ನಡೆಯುತ್ತಿದೆ. ಈ ಅನ್ನದಾನದ ಜತೆಗೆ ಅವರ ಜ್ಞಾನಪ್ರಸಾರ ಯಜ್ಞವೂ ಗಮನಾರ್ಹ. ತಲ್ಲೂರರು ಮ. ನಾ. ಹೆಬ್ಟಾರ್ ವಿರಚಿತ ದಾರಿದೀಪ, ಪಿ. ವಾಸುದೇವ ರಾವ್ ವಿರಚಿತ ಬಾಳಬೆಳಕು ಮತ್ತು ಆ್ಯನ್ ಇಂಟ್ರಡಕ್ಷನ್ ಟು ಭಗವದ್ಗೀತೆ ಹಾಗೂ ತಾನೇ ರಚಿಸಿದ ಮುಂಬೆಳಕು, ಹೊಂಬೆಳಕು, ಪಾಥೇಯ ಎಂಬ ನೀತಿಸಂಹಿತೆಗಳನ್ನು ತನ್ನ ತಲ್ಲೂರ್ ಫ್ಯಾಮಿಲಿ ಟ್ರಸ್ಟ್ನಿಂದ ಪ್ರಕಟಿಸಿದ್ದಾರೆ. ಈ ನೀತಿ ಬೋಧಕ ಪುಸ್ತಕಗಳ ಸಾವಿರಾರು ಪ್ರತಿಗಳನ್ನು ಅನೇಕ ಶಿಕ್ಷಣ ಸಂಸ್ಥೆಗಳಿಗೆ ಉಚಿತವಾಗಿ ವಿತರಿಸಿದ್ದಾರೆ. ವಿದ್ಯಾರ್ಥಿಗಳು ಈ ಮೂಲಕ ಸತøಜೆಗಳಾಗಿ ಸುದೃಢ ಭಾರತ ನಿರ್ಮಾಣವಾಗ ಬೇಕೆಂಬುದು ತಲ್ಲೂರರರ ಆಶಯ.
**********************
**********************
ಕೃಪೆ :
http://www.udayavani.com
|
|
|